Friday, April 12, 2013

ನಮ್ಮವರು: ಜೀವನೋತ್ಸಾಹದ ರಾಮರಾವ್

ನಮ್ಮಲ್ಲಿ ಅದೆಷ್ಟೊಂದು ಸೋಮಾರಿತನ ಬಂದಿದೆ ಮತ್ತು ಕೆಲವೊಮ್ಮೆ ನಾವೆಷ್ಟು ನಾಲಾಯಕ್ ಆಗಿದಿವಿ ಅನಿಸುತ್ತೆ. ಕೊನೆಯ ಭಾನುವಾರ ನನ್ನ ಸ್ನೇಹಿತನ ಮದುವೆ ಇತ್ತು. ಹೋಗಬೇಕೆಂದು ನಿರ್ಧರಿಸಿ ಕೆಲವರು ಸ್ನೇಹಿತರಿಗೆ ಫೋನ್ ಹಾಯಿಸಿ ಕೇಳಿದೆ. ಮದುವೆ ಇದ್ದಿದ್ದು ಬೆಂಗಳೊರಿನಲ್ಲೇ. ಒಬ್ಬ ಹೇಳಿದ, ಮಗ ತುಂಬಾ ಟ್ರಾಫಿಕ್, ಬೈಕ್ ಅಲ್ಲಿ ಬರೋಕೆ ಬೇಜಾರು, ಮತ್ತೊಬ್ಬ ಮಗ ಏನು ಗಿಫ್ಟ್ ತಗೊಂಡಿಲ್ಲ, ಹೋಗ್ಡಿದ್ರು ನಡಿಯತ್ತೆ ಬಿಡು ನಾವೇನು ಅಷ್ಟು ಕ್ಲೋಸ್ ಇರಲಿಲ್ಲ ಬಿಡು ಅಂದ! ಇಬ್ಬರೂ ಸೋಮಾರಿಗಳೇ, ೫ ದಿನ  ಕತ್ತೆ ತರ ಕೆಲಸ ಮಾಡಿ ಮತ್ತೆರಡು ದಿನ ಬರಿ ಮಲಗುವ, ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜೀವನವನ್ನು ಯಾವಾಗಲು ಬೈಕೊಂಡೆ ಕಳೆಯುವ ಸ್ನೇಹಿತರು! ನಾವು ಇಂತವರನ್ನು ಬಹಳಷ್ಟು ಜನರನ್ನ ನೋಡಿರ್ತಿವಿ.

ಆದರೆ ಕೆಲವರು ನಮ್ಮೊಳಗೇ ಇರುವವರು ಅದೆಷ್ಟು ಉತ್ಸಾಹದಿಂದ ಜೀವನ ಸಾಗಿಸ್ತಾರೆ. ಅದೇನೇ ಕಷ್ಟದ ಸನ್ನಿವೇಶ ಬರಲಿ, ಅದೆಷ್ಟೇ ದಣಿವಿರಲಿ, ಅವರ ಜೀವನೋತ್ಸಾಹಕ್ಕೆ ಒಂದು ಚೂರು ಕಡಿಮೆ ಆಗೋಲ್ಲ. ಅಂಥಹ ಜೀವನೋತ್ಸಾಹವನ್ನು ನಾನು ಬಹಳಷ್ಟು ಸ್ನೇಹಿತರಲ್ಲಿ, ಹೊರಗಿನವರಲ್ಲಿ, ಬಸ್ಸಿನಲ್ಲಿ, ಪಾರ್ಕಿನಲ್ಲಿ, ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತೆ ಕೆಲವು ಸ್ಥಳಗಳಲ್ಲಿ ಕಂಡಿದ್ದೇನೆ. ಇಲ್ಲಿ ನಾನು ಮೊನ್ನೆ ಭೇಟಿಯಾದ ರಾಮರಾವ್ ಬಗ್ಗೆ ಬರೆಯೋಣ ಎಂದು ಅನಿಸಿತು. ಮೊನ್ನೆ ಅಂದರೆ ಎರಡು ವಾರಗಳ ಹಿಂದೆ ಎಂದು ಓದಿಕೊಳ್ಳಿ :)

ವೀಕ್ಎಂಡ್ ಗಳಲ್ಲಿ ಲೇಟ್ ಆಗಿ ಎದ್ದರೂ ಸಹ ಒಂದೆರಡು ಸುತ್ತು ಹಾಕಿ ಬರೋಣ ಎಂದು ನಮ್ಮ ಮನೆಯ ಹತ್ತಿರ ಇರುವ ಪಾರ್ಕಿಗೆ ಹೋಗುತ್ತೇನೆ. ನನಗೆ ಒಂದು ಸಿಕ್ಕವರಿಗೆಲ್ಲ ಒಂದು ಸಣ್ಣ ನಗು ಕೊಡುವ ಅಭ್ಯಾಸವಿದೆ(ಕೆಲವೊಮ್ಮೆ ಮುಂದಿನವರು ಪ್ರತಿಕ್ರಿಯೆ ಕೊಡದಿದ್ದರೂ ನಾನು ಕೊಟ್ಟು ಮುಂದೆ ಸಾಗುವೆ). ಒಂದೆರಡು ಸುತ್ತು ಹಾಕಿದ ಮೇಲೆ ಒಂದು ಬೆಂಚಿನ ಮೇಲೆ ಒಬ್ಬ ಸರಿ ಸುಮಾರು ನಮ್ಮ ಅಪ್ಪನ ವಯಸ್ಸಿನವರು ಕೂತು ವಿಶ್ರಮಿಸುತ್ತಿದ್ದರು. ಅವರ ಬಲಗೈಯಲ್ಲಿ ಈ ತಾತಂದಿರು ಹಿಡಿದುಕೊಳ್ಳುವ ಊರುಗೋಲು. ಅವರಿಗೆ ಒಂದು ಸಣ್ಣ ನಗು ಬೀರಿದೆ, ಮತ್ತೆ ನನ್ನ ಸುತ್ತು ಮುಗಿಸಲು ಮುಂದೆ ಓಡಿದೆ. ಓಟ ಮುಗಿದ ಮೇಲೆ ಸುಸ್ತಾಗಿ ಸುಮ್ಮನೆ ನಡ್ಕೊಂಡು ಬರುತ್ತಿದ್ದೆ, ರಾಮರಾವ್ ಇನ್ನ ಅಲ್ಲಿಯೇ ಕುಳಿತ್ತಿದ್ದರು. ನನ್ನ ನೋಡಿದ ತಕ್ಷಣ ಅವರು "ಹಲೋ" ಅಂದ್ರು, ನಾನು ಹಲೋ ಸರ್ ಅಂದು ಅವರ ಪಕ್ಕ ಕುಳಿತೆ. ಅವರು ಆ ಪಾರ್ಕಿಗೆ  ಮೊದಲು ಬರುತ್ತಿದ್ದರಂತೆ.  ಕೊನೆಯ ೮ ತಿಂಗಳಿಂದ ಬಂದಿರಲಿಲ್ಲ ಅಂದ್ರು. ನಾನು ಯಾಕೆ ಬರುತ್ತಿರಲಿಲ್ಲ ಅಂತೆಲ್ಲ ಪ್ರಶ್ನೆ ಹಾಕಿದೆ.


ಅವರು ಅವರ ಕಥೆ ಹೇಳಲು ಶುರು ಮಾಡಿದರು. ೮ ತಿಂಗಳ ಹಿಂದೆ ರೋಡ್ ಕ್ರಾಸ್ ಮಾಡುವಾಗ ಒಂದು ಟೆಂಪೋ ಗುದ್ದಿ ಅವರ ಎರಡು ಕಾಲುಗಳನ್ನ ಕಳೆದುಕೊಳ್ಳುವಂಥಹ ಪರಿಸ್ಥಿತಿ ಬಂತು. ಅವರು ಈಗ ಎರಡೂ ಕೃತಕ ಕಾಲುಗಳಲ್ಲಿ ನಡೆಯಬೇಕು. ಅದರಲ್ಲಿಯೇ ಅವರು ಯಾರ ಸಹಾಯವೂ ಇಲ್ಲದೆ, ಕೆಲವೊಮ್ಮೆ ಸ್ವಲ್ಪ ಸಹಾಯ ಪಡೆದು ಕೊಂಡು ಅವರ ಜೀವನ ಸಾಗಿಸುತ್ತಿದ್ದಾರೆ.

ಹೀಗೆ ನಾವಿಬ್ಬರು ಕೆಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾಗ, ಮತ್ತೊಬ್ಬರು ನಮ್ಮ ಪಾರ್ಕಿನಲ್ಲೇ ವಿಹರಿಸಲು ಬರುವವರು ಬಂದು ಕೇಳಿದರು. ಇವಾಗ ಕಷ್ಟ ಆಗುತ್ತೆ ಅಲ್ವಾ, ನಡೆಯೋಕೆ ಎಲ್ಲ ಆಗೋಲ್ಲ, ಸುಮ್ಮನೆ ವಾಕ್ ಎಲ್ಲ ಯಾಕೆ ಮಾಡ್ತಿರ ಅಂತ. ಒಂದು ನಿಮಿಷವೂ ತಡ ಮಾಡದೆ, ಏನನ್ನು ಯೋಚಿಸದೆ ಅವರು ಪ್ರತಿಕ್ರಿಯಿಸಿದರು. ಅವರ ಪ್ರತಿಕ್ರಿಯೆ ನಿಜಕ್ಕೂ ನನ್ನ ಉತ್ಸಹವನ್ನ ಮತ್ತು ಗೌರವವನ್ನ ಹಿಮ್ಮಡಿಗೊಳಿಸಿತು. ಅವರ ಉತ್ತರ ಹೀಗಿತ್ತು, "ಅಯ್ಯೋ ತೊಂದರೆ ಇಲ್ಲ ಸ್ವಾಮೀ, ನೀವೂ ಅರ್ಧ ಗಂಟೆಯಲ್ಲಿ ೫ ರೌಂಡ್ ಹಾಕಿದರೆ ನಾನು ಒಂದು ರೌಂಡ್ ಹಾಕ್ತೇನೆ ಅಷ್ಟೇ. ನಾನು ತೊಂದರೆಯಿಲ್ಲದೆ ನಡಿತೇನೆ ಅಂದ್ರು". ಅದೆಷ್ಟು ಜೀವನೋತ್ಸಾಹ ಅಲ್ವೇ, ಎರಡು ಕಾಲಿಲ್ಲ ಮತ್ತು ಕೃತಕ ಕಾಲುಗಳ ಮೇಲೆ ಜೀವನ. ಮತ್ತಷ್ಟು ಮಾತನಾಡಿ ಮತ್ತೊಂದು ನಗು ಬೀರಿ ಅಲ್ಲಿಂದ ಅವರ ಬಗ್ಗೆಯೇ ಯೋಚಿಸುತ್ತಾ ಮನೆಯ ಕಡೆಗೆ ಹೊರಟೆ!

ನಿನ್ನೆ, ಯುಗಾದಿ ಹಬ್ಬದ ದಿನ ನನ್ನೊಬ್ಬ ಸ್ನೇಹಿತ ಸುಹಾಸ್ ನನ್ನ ನೋಡಲು ಹೋಗಿದ್ದೆ. ಅವನು ಹೋದ ವಾರ ಊಟಿ ಬಳಿ ಸೈಕ್ಲಿಂಗ್ ಗೆ ಹೋಗಿ, ಬಿದ್ದು, ಮುಖ ಮತ್ತು ಮೈ ಕೈಗೆ ಪೆಟ್ಟು ತಿಂದಿದ್ದ. ಒಂದೆರಡು ದಿನ ಆಸ್ಪತ್ರೆಯಲ್ಲಿ ಇದ್ದು, ಮೊನ್ನೆ ತಾನೇ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದ. ಅವನನ್ನ ಸ್ವಲ್ಪ ಸಮಯ ಮಾತನಾಡಿಸಿ, ಅವರಮ್ಮ ಕೊಟ್ಟ ಮಾವಿನಕಾಯಿ ಚಿತ್ರಾನ್ನ ಮತ್ತು  ಹಲ್ವಾ ತಿಂದು ಹೊರಟೆ. ಬಾಗಿಲ ಬಳಿ ಬಂದು ಇನ್ನೇನು ಹೊರಡುವ ಸಮಯದಲ್ಲಿ, ಅವರ ತಂದೆಯ ಜೊತೆ ಮಾತನಾಡುತ್ತಿದ್ದೆ. ಅವರು ಹೇಳಿದ್ರು ಸುಹಾಸ್ ಗೆ ಯಾವಾಗಲು ನಿನ್ನ ಮುಂದಿನ ಹಲ್ಲನ್ನ ಮುರಿಸಿ ಕೃತಕವಾದ ಬೇರೆಯ ಹಲ್ಲನ್ನ ಹಾಕಿಸ್ತಿನಿ ಅಂತಿದ್ದೆ. ಅದಕ್ಕೆ ಅವನು ನನಗೆ ನೀವೂ ಹೇಳ್ತಿದ್ರಲ್ಲ ಅಪ್ಪ ನೋಡಿ ಈವಾಗ ಮುಂದಿನ ಹಲ್ಲನ್ನ ಹಾಕಿಸಲಿ ಅಂತ ಮುರ್ಕೊಂಡಿದಿನಿ ಅಂದನಂತೆ. ಆ ನೋವಲ್ಲೂ ಅದೆಷ್ಟು ಉತ್ಸಾಹ ಮತ್ತು ಏನು ಆಗಿಯೇ ಇಲ್ಲ ಎಂಬ ಭಾವ ಅಲ್ಲವೇ? ನಾನು ಕಂಡಂತೆ ಇವನು ಒಬ್ಬ ಉತ್ಸಾಹಿ! ಅವನು ಬೇಗ ಗುಣಮುಖನಾಗಲಿ ಎಂದು ಬಯಸ್ತೇನೆ.
 ಇವನೇ, ಹಲ್ಲು ಮುರಿದುಕೊಂಡ ಸುಹಾಸ್
ನಾವುಗಳು ಅಷ್ಟೇ, ಏನೋ ಮಾಡುವ ಭರದಲ್ಲಿ, ಜೀವೊನೋತ್ಸಹವನ್ನೇ ಮರೆತಿರುತ್ತೇವೆ. ಅದೇನೋ ಯಾವಾಗಲು ನಮ್ಮ ಜೀವನ ಸಪ್ಪೆ, ಬೋರು, ಏನು ಬದಲಾವಣೆ ಇಲ್ಲ ಅಂದು ಗೊಣಗುವವರನ್ನು ಯಾroo ಸರಿ ಮಾಡಲಾಗದು! ಆ ರಾಮರಾವ್ ಮತ್ತು ನನ್ನ ಸ್ನೇಹಿತ ಸುಹಾಸ್ ನ  ಜೀವನೋತ್ಸಾಹ ನಮ್ಮದ್ದಗಾಲಿ. ಹೌದಲ್ಲವೇ? 

Sunday, March 31, 2013

ನಮ್ಮವರು: ವೀಳ್ಯದೆಲೆ ಅಜ್ಜಿ

ಮೊನ್ನೆ ಮೊನ್ನೆ ನಮ್ಮ ಆಫೀಸಿನಲ್ಲಿ ಕಾಫಿ ಹೀರುತ್ತಾ, ಬಿಟ್ಟಿ ಬ್ರಿಟಾನಿಯ ಬಿಸ್ಕತ್ತು ತಿನ್ನುತ್ತಾ ಹರಟುತ್ತಿರುವಾಗ ಒಂದು ವಿಷಯ ಬಂತು.  ಅದು ಬಹಳ ಚಿಲ್ಲರೆ ವಿಷಯವೇ, ಆದರೂ ಅದನ್ನ ಸೂಕ್ಷ್ಮ ರೀತಿಯಲ್ಲಿ ನೋಡಿದರೆ ಇಲ್ಲೊಂದು ದೊಡ್ಡ ಕಂದಕ ಬೆಳೆಯುತ್ತಿದೆ ಎಂದು ಅನಿಸಿತು! ವಿಷಯವೇನೆಂದರೆ ನಮ್ಮ ಆಫೀಸಿನ ಬಸ್ಸುಗಳಲ್ಲಿ ಜನ ಮಾತನಾಡುವುದಿಲ್ಲ ಅನ್ನುವುದು! ನಿಮಗೆ ಅನಿಸಬಹುದು ಮತ್ತೆ ಏನು ಮಾಡುವರು ಇವರು ಅಂತ! ಕೆಲವರು ಪಕ್ಕದವರ ಬಿಟ್ಟು ದೂರದಲ್ಲಿರುವವರ ಜೊತೆ ಫೋನಿನಲ್ಲೇ ಮುಳುಗುವ ಮಂದಿ ಅಥವಾ ಸ್ವಲ್ಪ ಸಮಯ ಸಿಕ್ಕಿತಲ್ಲ ಎಂದು ಗೊರಕೆ ಹಾಕುವವರು ಸಿಗುವರು(ಕೆಲವೊಮ್ಮೆ ನಾನು ಗೊರಕೆ ಹಾಕಿದ್ದೇನೆ, ಪಕ್ಕದವರು ಹೇಳಿದ್ದು). ಹೀಗೆ ಕಾಫಿ ಕಾರ್ನರ್ ಹರಟೆ ಮುಂದುವರೆದು ನಮ್ಮ ಜೀವನ ಅದೆಷ್ಟು ಯಾಂತ್ರಿಕವಾಗುತ್ತಿದೆ ಎನ್ನುವ ಕಹಿ ಸತ್ಯ ನಮ್ಮ ಆ ದಿನದ ಟಾಪಿಕ್!

ಆದರೂ ನಮ್ಮೊಳಗೆ ಕೆಲವಾರು ಜನ ನಮ್ಮ ಯಾಂತ್ರಿಕೃತ ಬದುಕನ್ನ ಆ ಕ್ಷಣಕ್ಕೆ ನಿಲ್ಲಿಸಿ, ಒಂದು ಸಣ್ಣ ಸುಂದರ ಟಚ್  ಕೊಡುವ ಹಾಗು ಮನಸಿಗೆ ಈ ದಿನಗಳಲ್ಲೂ ಆ ಬಾಂಧವ್ಯ ಬೆಸೆಯುವ ಅನಾಮಿಕ ಸಾಮಾನ್ಯ ಜನರೂ ಸಿಗುತ್ತಾರೆ. ಆ ಸಾಮಾನ್ಯ, ಮನಸಿಗೆ ಒಳ್ಳೆಯ ಹಿತಾನುಭವ ನೀಡುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಬರೆಯೋಣ ಅಂದುಕೊಂಡು ಈ ಸರಣಿ ಶುರು ಮಾಡಿದ್ದೇನೆ.

ಅದಕ್ಕಾಗಿ ಮೊದಲಿಗೆ ಬರೆಯಬೇಕು ಅನಿಸಿದ ಮೊದಲ ವ್ಯಕ್ತಿ ವೀಳ್ಯದೆಲೆ ಅಜ್ಜಿ. ನಿಮಗೆ ಅನಿಸುತ್ತಿರಬಹುದು ಇದು ಯಾರು ಅಂದು. ನಾನು ಪ್ರತಿ ಭಾನುವಾರ ಯಶವಂತಪುರ ಸಂತೆಗೆ ಹೋದಾಗ ವೀಳ್ಯದೆಲೆಗಾಗಿ ಅಶ್ರಯಿಸಿರುವ ಒಂದು ಅಜ್ಜಿ. ಈ ದಿನಗಳಲ್ಲಿ ಅದೆಂಥಹ ಬಿಸಿಲು. ಅಲ್ಲೊಂದು ಕಪ್ಪು ಛತ್ರಿ ಹಿಡಿದು ಎಲೆ-ಅಡಿಕೆ ಜಗೆಯುತ್ತಾ ಕೂತಿರುತ್ತಾಳೆ ಆ ಅಜ್ಜಿ. ದಪ್ಪ ಶರೀರ, ಬಿಸಿಲಿಗೆ ಬೆಂದು ಕಪ್ಪಾದ ಮುಖ. ಆದರೆ, ತಲೆಯ ತಿನ್ನುವ ಗ್ರಾಹಕರ ನೋಡಿಯು ಶಾಂತ ಚಿತ್ತದಿಂದ ವೀಳ್ಯದೆಲೆ ಮಾರುವ ಅಜ್ಜಿ. ಇವಳಿಗೆ ಸರಿ ಸುಮಾರು ೬೦ ದಾಟಿರಬಹುದು. ನನ್ನ ಪರಿಚಯ ಆಕೆಗೆ ಆಗಿದ್ದು ವೀಳ್ಯದೆಲೆ ಬುಟ್ಟಿ ಇಟ್ಟುಕೊಂಡಿದ್ದ ಅಜ್ಜಿಯ ಹೋಗಿ ಕರಿಬೇವನ್ನು ಕೇಳಿದಾಗ. ನಾನು ಕೇಳಲೂ ಒಂದು ಕಾರಣವಿತ್ತು. ಆ ವೀಳ್ಯದೆಲೆ ಬುಟ್ಟಿಯ ಜೊತೆ ಒಂದು ಕಟ್ಟು ಕರಿಬೇವನ್ನ ಅಜ್ಜಿ ಇಟ್ಟುಕೊಂಡಿದ್ದಳು. ಅವಳಿಗಾಗಿ ಒಬ್ಬ ತಂದುಕೊಟ್ಟು ಹೋಗಿದ್ದ. ನಾನು ಪಟ್ಟನೆ ಹೋಗಿ ಕೇಳಿದ ತಕ್ಷಣ ಅಜ್ಜಿ ಒಂದು ನಿಮಿಷವನ್ನೂ ಯೋಚಿಸದೆ ಕೊಟ್ಟುಬಿಟ್ಟಳು. ನಾನು ದುಡ್ಡು ಎಷ್ಟು ಎಂದು ಕೇಳಿದೆ, ಅದಕ್ಕೆ ಅವಳ ಉತ್ತರ ನನಗೆ ಅದನ್ನ ಪುಕ್ಕಟೆಯಾಗಿ ಮತ್ತೊಬ್ಬ ವ್ಯಾಪಾರಿ ತಂದು ಕೊಟ್ಟ ನೀನು ದುಡ್ಡು ಕೊಡುವುದು ಬೇಡ ಅಂದು ಬಿಟ್ಟಳು. ನನಗೆ ಆಶ್ಚರ್ಯ ಮತ್ತು ಅದನ್ನು ತೆಗೆದು ಕೊಂಡು ಬರಲು ಭಯ. ನಾನು ಪುಕ್ಕಟೆಯಾಗಿ ಬೇಡವೇ ಬೇಡ ಎಂದರೂ ಅಜ್ಜಿ ಸುಮ್ಮನೆ ತೆಗೆದುಕೊಂಡು ಹೋಗು ಎಂದಳು. ಅದನ್ನ ತಗೊಂಡು ಮನೆಗೆ ಬರುವ ತನಕವೂ ಅದೇ ಯೋಚನೆ. ನಮ್ಮಲ್ಲಿಯೂ ಎಂತೆಂಥ ಜನರಿದ್ದಾರೆ.

ಅಂದಿನಿಂದ ಪ್ರತಿ ಭಾನುವಾರ ಅಲ್ಲಿಗೆ ಹೋದಾಗಲೆಲ್ಲ ಮತ್ತಷ್ಟು ಸಲಿಗೆ, ಸ್ವಲ್ಪ ಮಾತು ಮತ್ತು ಒಂದು ಸಣ್ಣ ನಗು. ಅವಳಿಗೂ ಸ್ವಲ್ಪ ಖುಷಿ ನನಗೆ ಸ್ವಲ್ಪ ಜಾಸ್ತಿಯೇ ಖುಷಿ. ಮಾನವ ಸಂಬಂಧಗಳಿಗೆಕೆ ಬೇಲಿ, ಎಲ್ಲಿ ಬೇಕಾದರೂ ಒಂದು ಸುಂದರ ಕ್ಷಣ ಸೃಷ್ಟಿ ಆಗಬಹುದು. ಸುತ್ತಲಿರುವವರನ್ನ ಸ್ವಲ್ಪ ಪ್ರೀತಿಯಿಂದ ಮಾತನಾಡಿಸೋಣ. ಇತ್ತೀಚಿನ ದಿನಗಳಲ್ಲಿ ತರಕಾರಿ ತರುವುದರಲ್ಲೂ ಖುಷಿ ಅಡಗಿದೆ ಎಂದು ಅನಿಸುತ್ತಿದೆ!

 ದೇವರಿಗೆ ಒಂದಷ್ಟು ವೀಳ್ಯದೆಲೆ ಕೊಡಜ್ಜಿ ಅಂದರೆ, ಒಂದಷ್ಟು ಕೊಟ್ಟು ಹತ್ತು ರುಪಾಯಿ ಕೊಟ್ಟರೆ ಎರಡೇ ರುಪಾಯಿ ತಗೊಂಡು ಉಳಿದ ಹಣ ವಾಪಸು ನೀಡುವ ಅಜ್ಜಿ ಎಲ್ಲಿ ನಮ್ಮ ಮನೆಯ ಹತ್ತಿರದ ಶೆಟ್ಟರು ಮೂರು ರೂಪಾಯಿಗೆ ಮೂರು ಎಲೆ ಕೊಟ್ಟು ದೇವರಿಗೆ ಕೊಡಬಹುದಾದ ಎಲೆ ಇಲ್ಲ ಎನ್ನುತ್ತಲೇ ಜಾಸ್ತಿ ದುಡ್ಡಿಗೆ ಮಾರುವವರು ಎಲ್ಲಿ!

ಮುಂದಿನ ವಾರ ಹೋದಾಗ ನನ್ನ ಮೊಬೈಲ್ ತಗೊಂಡು ಹೋದರೆ ಒಂದು ಫೋಟೋ ಕ್ಲಿಕ್ಕಿಸಿ ತಂದು ಲಗತ್ತಿಸುವೆ ಇಲ್ಲಿ!

Sunday, March 24, 2013

ನಮಗ್ಯಾಕೆ ಬೇಕು ರಾಜಕೀಯ! ಅದರಿಂದ ನಮಗೆ ಏನು ಪ್ರಯೋಜನ

ನನ್ನ ಕೆಲವು ಸ್ನೇಹಿತರಿಗೆ, ಈ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅಂತೆಲ್ಲ ನಮ್ಮ  ಶಾಲೆಗಳಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಭುಗಳು ಮತ್ತು ಪ್ರಜೆಗಳು ಇಬ್ಬರು ದ್ವಿಮುಖವಾಗುತ್ತಿರುವುದು ವಿಷಾದದ ಸಂಗತಿ.

ನಮ್ಮಲ್ಲಿ ಬಹಳ ರೀತಿಯ ಜನರಿದ್ದಾರೆ. ನಾನು ಇಲ್ಲಿ ಹೇಳುತ್ತಿರುವುದು ಆರ್ಥಿಕವಾಗಿ. ಒಂದು ಉತ್ತಮ ವರ್ಗ, ಸರ್ಕಾರದಿಂದ ಅಷ್ಟೇನೂ ಬಯಸದೆ ತಮ್ಮ ಪಾಡಿಗೆ ತಾವಿರುವ ಮತ್ತು ಮನಸಿದ್ದರೆ ಬಂದು ವೋಟು ಹಾಕುವ ಜನ. ಮತ್ತೊಂದು ಮಧ್ಯಮ ವರ್ಗ, ಇವರು ಸರಿಯಾಗಿ ವೋಟು ಮಾಡುವ ಸರ್ಕಾರದಿಂದ ಸ್ವಚ್ಛ, ಪಾರದರ್ಶಕ ಮತ್ತು ಉತ್ತಮ ಆಡಳಿತವನ್ನು ಬಯಸುವ ಜನ. ಇನ್ನೊಂದು ಆರ್ಥಿಕವಾಗಿ ದುರ್ಬಲ ವರ್ಗ, ಇವರು ಅವರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ವೋಟು ಕೊಡುವ ಜನ.

ನಮ್ಮ ದೇಶದಲ್ಲಿ ನಾವು ಓದಿರುವಂತೆ ಮತ್ತು ನೋಡಿರುವಂತೆ ಆರ್ಥಿಕವಾಗಿ ದುರ್ಬಲ ವರ್ಗದವರೇ ಜಾಸ್ತಿ. ಬಹಳಷ್ಟು ಜನಕ್ಕೆ     Maslow's hierarchy of needs ಬಗ್ಗೆ ಗೊತ್ತಿರಬಹುದು( ಗೊತ್ತಿರದವರು ಇಲ್ಲಿ ಓದಿ - http://en.wikipedia.org/wiki/Maslow's_hierarchy_of_needs). ಮೊದಲು ಮಾನವನಿಗೆ ಬೇಕಾಗಿರುವುದು ಗಾಳಿ, ಊಟ, ವಸತಿ ಮತ್ತು ಆ ಕ್ಷಣದ ಅನುಕೂಲಗಳು. ಇದರಿಂದಾಗಿಯೇ ಬಹಳ ಜನ ನಮ್ಮಲ್ಲಿ ದುಡ್ಡು ತಗೊಂಡು ವೋಟು ಹಾಕುವುದು ಅಥವಾ ವಿವೇಚನೆ ಇಲ್ಲದೆ ವೋಟು ಹಾಕುವುದು ಎಂಬುದು ನನ್ನ ಅನಿಸಿಕೆ(ಇದು ತಪ್ಪು ಇರಲು ಬಹುದು, ನೀವು ಯೋಚಿಸಿ)

ಆದರೆ ಅರ್ಥಿಕ ಸ್ಥಿತಿ ಉತ್ತಮವಾದಂತೆ ಈ ರೀತಿಯ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಇದರ ಬಗ್ಗೆ ಅಷ್ಟೇನೂ ತಲೆಯ ಕೆಡಿಸಿ ಕೊಳ್ಳುವ ಅಗತ್ಯ ಇಲ್ಲ. ಆದರೆ ನಮ್ಮ ಮನಸ್ಥಿತಿ ದೇಶವೇ ಹೀಗೆ, ನಮ್ಮ ಜನ ಒಳ್ಳೆವರನ್ನ ಗೆಲ್ಲಿಸುವುದಿಲ್ಲ, ಗೆದ್ದರೂ ಅವರು ಕೆಲಸ ಮಾಡುವುದಿಲ್ಲ ಅನ್ನುವ ಮನೋಭಾವ ಬದಲಾಗಬೇಕಿದೆ. ನಮ್ಮಲ್ಲಿ ಬದಲಾವಣೆಗಳು ಆಗುತ್ತಿವೆ, ಆದರೆ ಅದು ನಿಧಾನವಾಗಿ ನಡೆಯುತ್ತಲೇ ಇವೆ. RTI, ಭೂಮಿ (http://bhoomi.karnataka.gov.in/landrecordsonweb/) ಮತ್ತು ಸಕಾಲ ನನಗೆ ತಿಳಿದಿರುವಂತೆ ಉತ್ತಮ ಯೋಜನೆಗಳೇ. It takes time ಅಷ್ಟೇ! 


ಇನ್ನೇನು ಕರ್ನಾಟಕದ ವಿಧಾನಸಭೆಗೆ ಚುನವಾಣೆ ಘೋಷಣೆಯಾಗಿದೆ. ನಮ್ಮ ದೇಶವೇ ಹೀಗೆ ಉದ್ದರವಾಗೋಲ್ಲ, ನಮ್ಮ ಜನಾನೇ ಹೀಗೆ ಅನ್ನುವುದನ್ನ ಬಿಟ್ಟು. ನಾವೆಲ್ಲಾ ವೋಟು ಹಾಕೋಣ, ಮತ್ತು ಮತ್ತೆ ಕೆಲವರಲ್ಲಿ ಜಾಗೃತಿ ಮೂಡಿಸಿ  ಅವರು ಸರಿಯಾದ ಅಭ್ಯರ್ಥಿಗಳಿಗೆ ವೋಟು ಹಾಕುವಂತೆ ಪ್ರೋತ್ಸಾಹಿಸೋಣ. 

ನನ್ನದೊಂದು ಕೋರಿಕೆ: ನನ್ನ ಸ್ನೇಹಿತರು, ಜೊತೆಯಲ್ಲಿ India Against Corruptionನಲ್ಲಿ ಕೆಲಸ ಮಾಡಿದ ಯೋಗೇಶ್ ದೇವರಾಜ್ (https://www.facebook.com/YogeshDevarajForMLA) ಬ್ಹೊಮ್ಮನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರುವರು. ಯೋಗೇಶ್, ಬೆಂಗಳೂರಿನ RVCEಯಲ್ಲಿ ಓದಿ ಸರಿಸುಮಾರು ೨೦ ವರ್ಷ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡಿ(ಅದರಲ್ಲಿ ೧೩ ವರ್ಷ ಅಮೇರಿಕದಲ್ಲಿ) ಈಗ ನಮ್ಮೆಲ್ಲರ ಒತ್ತಾಯಕ್ಕೆ, ಚುನಾವಣಾ ಕಣದಲ್ಲಿ ಇದ್ದಾರೆ. ದಯವಿಟ್ಟು ನೀವು ಅವರ ಬಗ್ಗೆ ಇಲ್ಲಿ "http://www.yogeshdevaraj.in/" ಮತ್ತಷ್ಟು ತಿಳಿದುಕೊಳ್ಳಿ. ನಿಮಗೆ ಈ ವ್ಯಕ್ತಿ ಉತ್ತಮ ಎಂದು ಅನಿಸಿದರೆ ಮಾತ್ರ ದಯವಿಟ್ಟು ಸ್ವಲ್ಪ ಸಹಾಯ ಮಾಡಿ. ಅವರ ಬಗ್ಗೆ ಜನಾಭಿಪ್ರಾಯ ಬೆಳೆಸಿ(https://www.facebook.com/YogeshDevarajForMLA), ಆದರೆ  ಸ್ವಲ್ಪ ಹಣ ಸಹಾಯ ಮಾಡಿ, ನಮ್ಮ ಜೊತೆ ಬಂದು ಮನೆ ಮನೆ ಸುತ್ತಿ ಜನರಲ್ಲಿ ಜಾಗ್ರತಿ ಮೂಡಿಸಿ.
ನಮ್ಮ ಕಚೇರಿಯಲ್ಲಿ ಕಂಡ ಪೋಸ್ಟರ್! Be A Hero
ಯೋಗೇಶ್ರವರ ಕಿರು ಪರಿಚಯ


Monday, February 25, 2013

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೩ ಮಾರ್ಚ್ ೨೩

ಈ ಬ್ಲಾಗಿನಲ್ಲಿ ನಾನು ಬರೆಯುವುದು ಬಹಳ ಕಡಿಮೆಯೇ! ನನ್ನ ಪ್ರವಾಸಗಳ ಪ್ರವಚನ ಮತ್ತು updateಗಳು ಇನ್ನೊಂದು www.pakkapravasi.blogspot.com ಅಲ್ಲಿ ಲಭ್ಯ. ಹೊದ ವರ್ಷ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ  ಜಯಂತ್ಯೋತ್ಸವದ ಬಗ್ಗೆ ಬರೆದಿದ್ದೆ. ಮತ್ತೆ ಈ ವರ್ಷವೂ ಬರೆಯೋಣ ಅಂದುಕೊಂಡಾಗ ಈ ಬ್ಲಾಗ್ ನೆನಪಾಯಿತು.

ಮೊನ್ನೆ  ಆಫೀಸಿನಲ್ಲಿ ಒಬ್ಬ ಸ್ನೇಹಿತ ಕೇಳ್ತಿದ್ದ ತೋಟದಪ್ಪನವರಿಗೆ ಯಾರು ಮಕ್ಕಳಿರಲಿಲ್ಲವ ಅಂತ, ನನ್ನ ಬಾಯಿಂದ ಥಟ್ಟನೆ ಬಂದ ಉತ್ತರ ನಾವೆಲ್ಲಾ ಅವರ ಮಕ್ಕಳೇ ಎಂದು(ಇದು ಸಿನಿಮೀಯ ಅನಿಸಿದರು ಸತ್ಯ ಘಟನೆ). ಅಲ್ಲಿ ಓದಿದ ಎಲ್ಲರಿಗೂ ಊಟ-ವಸತಿ ಕೊಟ್ಟು ಮತ್ತು ಬದುಕಲು ಬೇಕಾದ ಎಲ್ಲ skillsಗಳನ್ನ ಕಲಿಸಿದ ಹಾಸ್ಟೆಲ್ ಅದು(ತಿಗಣೆಯನ್ನೂ ಸ್ನೇಹಿತನನ್ನಾಗಿ ಮಾಡಿದ ಹಾಸ್ಟೆಲ್ ಅಂದರೂ ಅದು ಅತಿಶಯೋಕ್ತಿಯಾಗಲಾರದು). ಇಂಥಹ ಒಂದು ಸುಂದರ ಛತ್ರದ/ಹಾಸ್ಟೆಲಿನ ಕರ್ತೃವಿನ ಜಯಂತ್ಯೋತ್ಸವವನ್ನ ಹಳೆಯ ವಿದ್ಯಾರ್ಥಿಗಳ ಬಳಗ ಮೊನ್ನೆ ೨೩ ಫೆಬ್ರವರಿಯಂದು ಹಾಸ್ಟೆಲಿನ ಆವರಣದಲ್ಲಿ ಆಚರಿಸಿತು.

ಅದು ರಕ್ತದಾನದ ಮೂಲಕ ಮತ್ತು ಅಲ್ಲಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಜ್ಞಾನ ದಾಸೋಹದ ಮೂಲಕ... ನಮ್ಮ ವಿದ್ಯಾರ್ಥಿ ನಿಲಯದ ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಹೇಳಿದಂತೆ ಅಲ್ಲಿ ದಾನ ಮಾಡಿದ ರಕ್ತ ಪವಿತ್ರವಾದ, ಶುಭ್ರವಾದ, ಒಳ್ಳೆಯ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಿದ ರಕ್ತ. ಅದೂ ತೋಟದಪ್ಪನವರಂಥ ಮಹಾನ್ ದಾನಿಯ ನೆನಪಿನಲ್ಲಿ! ಸರಿಯಾಗಿ ೯೩ unitಗಳ ರಕ್ತವನ್ನು ದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಬಳಗ, ರೆಡ್ ಕ್ರಾಸ್ ಸಹಯೋಗದಿಂದ ಆಯೋಜಿಸಲಾಗಿತ್ತು. 

ರಕ್ತದಾನ ಮಾಡಿದ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು!

ಸ್ವಲ್ಪ ತಡವಾಗಿ ಶುರುವಾದರೂ, ಬಹಳ ಬೇಗ ಅದರ ವೇಗವನ್ನು ಪಡೆದುಕೊಂಡಿತು. ರಕ್ತದಾನ ಕಾರ್ಯಕ್ರಮನ್ನ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶ್ರೀ ಜಯಲಿನ್ಗಪ್ಪನವರು, ರಕ್ತದಾನದ ಮಹತ್ವ ಮತ್ತು ಅವರ ಅನುಭವಗಳನ್ನ ಮೆಲುಕು ಹಾಕಿದರು. ರೆಡ್ ಕ್ರಾಸ್ ಸಂಸ್ಥೆಯ ಡಾ|| ದಿವ್ಯಶ್ರೀ ರಕ್ತದಾನದ ಮಹತ್ವ, ಅವಶ್ಯಕತೆಗಳ ಬಗ್ಗೆ ತಿಳಿಸಿದರು. ಮಾತು ಮುಗಿದ ತಕ್ಷಣ ರಕ್ತದಾನ ಶುರುವಾಯಿತು. ಮೊದಲ ಬಾರಿಗೆ ರಕ್ತದಾನ ಮಾಡಿದ ನನ್ನ ಮಿತ್ರರು ರಾಜೇಶ್, ಅರುಣ್ ಮತ್ತು ಗೋಕುಲ್ ಬಹಳ ಸಂತೃಪ್ತಿಯಿಂದ ಕಂಡಿದ್ದು ಕಂಡು ಬಂತು.

ಉದ್ಯಮಿಯಾಗು, ಉದ್ಯೋಗ ನೀಡು!
ಮಧ್ಯಾನ, ಉದ್ಯಮಿಯಾಗು ಮತ್ತು ಉದ್ಯಮಿಯಾಗು ಎಂಬ ವಿಷಯದ ಮೇಲೆ ಡಾ|| ಚಂದ್ರಶೇಕರನ್ ಅವರ ಅನುಭವಗಳನ್ನ ಹಂಚಿಕೊಂಡರು. ಅವರ ಏಳು ಬೀಳುಗಳು, ಉದ್ಯಮಿ ಆಗಬೇಕಾದರೆ ಪಟ್ಟ ಶ್ರಮಗಳ ಪರಿಚಯವನ್ನ ಮಾಡಿಕೊಟ್ಟರು. ಅವರ ಅರ್ಧಾಂಗಿ "ಪೂರ್ತಿ-ಅಂಗಿಯಾಗಿ" ಕೆಲಸ ಮಾಡಿದ ತಮ್ಮ ದಿನಗಳ ಪುಟ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರು ಶ್ರೀ ಶಿವಾನಂದ್ ಮತ್ತು ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಉಪಸ್ಥಿತರಿದ್ದರು. 


Saturday, March 17, 2012

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೨ ಮಾರ್ಚ್ ೧೦

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವವನ್ನು ಬಹಳ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚಿಗೆ ಅಂದರೆ ೨೦೧೨ ಮಾರ್ಚ್ ೧೦ರಂದು ಹಿರಿಯ ವಿದ್ಯಾರ್ಥಿ ಬಳಗ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ಸಹಯೋಗದಲ್ಲಿ ಆಚರಿಸಿತು. ಬೆಂಗಳೂರಿನ ವಾಹನ ದಟ್ಟನೆ ಈ ಕಾರ್ಯಕ್ರಮಕ್ಕೂ ತನ್ನ ಇರುವಿಕೆಯನ್ನು ತೋರಿಸಿತ್ತು, ಸ್ವಲ್ಪ ತಡವಾಗಿಯೇ ಕಾರ್ಯಕ್ರಮ ಶುರುವಾಗಲು ಕಾರಣವಾಯಿತು! ಕಾರ್ಯಕ್ರಮಕ್ಕೆ ಮುನ್ನವೇ ಬಡಿಸಿದ ಕೇಸರಿಬಾತು ಉಪ್ಪಿಟ್ಟು ಬಾಯಿಗೆ ರುಚಿಯನ್ನು, ಬಡಿಸುತಿದ್ದ ನಮ್ಮ ನಿಲಯದ ಭಟ್ಟರ ನಗು ಮನಸಿಗೆ ಖುಷಿಯನ್ನು ನೀಡಿತು. ಮೊದಲಿಗೆ ವಚನ ಗಾಯನ ಕಾರ್ಯಕ್ರಮ ನಿಗದಿಯಾಗಿತ್ತು, ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಶಿವಾನಂದ ಹೆರೂರ ತಮ್ಮ ವಚನಗಳ ಮೂಲಕ ನೆರೆದಿದ್ದ ಹಿರಿಯ ಮತ್ತು ನಿಲಯದ ವಿದ್ಯಾರ್ಥಿಗಳ ಗಮನ ಸೆಳೆದರು, ಸ್ವಲ್ಪ ನಿದ್ದೆಯನ್ನೂ ಬರಿಸಿದರು ಎಂದರೂ ತಪ್ಪಿಲ್ಲ, ಎಲ್ಲರೂ ಅಷ್ಟು ಮಗ್ನ ಭಾವದಿಂದ ವಚನಗಾಯನವನ್ನ ಆಲಿಸಿದರು. ಮುಖ್ಯ ಅತಿಥಿಗಳಾಗಿ ಐ.ಎ.ಎಸ್. ಅಧಿಕಾರಿ ಡಾ|| ಸಿ ಸೋಮಶೇಖರ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಯಲಿಂಗಪ್ಪನವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ರೇವಣ್ಣಸಿದ್ದಯ್ಯಐ.ಪಿ.ಎಸ್ ಮತ್ತು ಹಿರಿಯ ಧರ್ಮದರ್ಶಿಗಳು ಹಾಗು ಹಳೆಯ ವಿದ್ಯಾರ್ಥಿಗಳೂ ಆದ ಶ್ರೀ ರಾಜೇಶ್ವರ ಶಾಸ್ತ್ರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ಶ್ರೀ ಚಿಕ್ಕಕರಿಯಪ್ಪ ಮತ್ತು ಮತ್ತೊಬ್ಬ ಹಿರಿಯ ವಿದ್ಯಾರ್ಥಿ ಹಾಗು ಖ್ಯಾತ ನಿರೂಪಕ ಶ್ರೀ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ ತಮ್ಮ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿನ ಅನುಭವಗಳನ್ನ ಮತ್ತು ಬದುಕಿನ ಯಶೋಗಾಥೆಗೆ ತೋಟದಪ್ಪ ನಿಲಯದ ಕೊಡುಗೆಯನ್ನು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೋಮಶೇಖರ್ ವಿದ್ಯಾರ್ಥಿಗಳಿಗೆ ತಮ್ಮ ಎಂದಿನ ಶೈಲಿಯಲ್ಲಿ ಮಾರ್ಗದರ್ಶನ ಮಾಡಿದರು. ಅವರ ಮಾತುಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೆಲ್ಲರೂ ಏಕ ಚಿತ್ತದಿಂದ ಆಲಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಸ್ವಲ್ಪ ಹಾಸ್ಯ, ಸ್ವಲ್ಪ ವೇದಾಂತ ಮತ್ತು ಸ್ವಲ್ಪ ಬುದ್ದಿ ಮಾತುಗಳಿಂದ ಎಲ್ಲರ ಮನ ಸೂರೆಗೊಂಡರು. ನಂತರ ಮಾತನಾಡಿದ ಶ್ರೀ ರೇವಣ್ಣಸಿದ್ದಯ್ಯನವರು ಎಂದಿನಂತೆ ವಿದ್ಯಾರ್ಥಿ ಜೀವನದ ಮುಖ್ಯ ಕರ್ತವ್ಯಗಳನ್ನ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟು, ಇಂಥಹ ಸುಂದರ ಕಾರ್ಯಕ್ರಮವನ್ನ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಬಳಗದ ಶ್ರಮವನ್ನ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯಲಿಂಗಪ್ಪನವರು ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಹೇಮಚಂದ್ರ ಸಾಗರ್ ರವರು ವಿದ್ಯಾರ್ಥಿಗಳಿಗೆ ಸಂದರ್ಶನ ತರಬೇತಿ ನೀಡಿದರು.ಒಟ್ಟಿನಲ್ಲಿ ಒಂದು ಸುಂದರ ಸಂಜೆಗೆ ತೋಟದಪ್ಪನವ ಜಯಂತ್ಯೋತ್ಸವ ಅನುವು ಮಾಡಿ ಕೊಟ್ಟಿತು.

ಕೊನೆಗೆ ಎಲ್ಲರೂ ಸೇರಿ ಕೊಟ್ಟ ಪೋಸು ಇಲ್ಲಿದೆ ನೋಡಿ. ಯಾರಾದರೂ ಈ ಚಿತ್ರದಲ್ಲಿ ಇಲ್ಲದಿದ್ದರೆ ದಯವಿಟ್ಟು ಮುಂದಿನ ಕಾರ್ಯಕ್ರಮದಲ್ಲಿ ಮುಗಿಯುವ ತನಕ ಕಾಯಬೇಕಾಗಿ ಕೊರಿಕೊಳ್ಳುತ್ತೇವೆ..:-)